Friday 17 February 2012

ಜಯಂತ್ ನುಡಿ

ಮೊದಲ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ. ಹಾಡುಗಳು ಸುಮಧುರವಾಗಿವೆ. ಮುಂಬರುವ ದಿನಗಳಲ್ಲಿ ಚಿಂತನಾಪೂರ್ವಕವಾದ ಹಾಡುಗಳು ನಿಮ್ಮಿಂದ ಹೊರಬರಲೆಂದು ನನ್ನ ಸಲಹೆ. ನಿಮ್ಮೆಲ್ಲ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆ.  


- ಜಯಂತ್ ಕಾಯ್ಕಿಣಿ
ಖ್ಯಾತ ಗೀತರಚನಕಾರರು 

Thursday 19 January 2012

ದೀಪಕ ರಾಗ

ದೀಪು - ನನ್ನ ತಮ್ಮನ ಸ್ನೇಹಿತ. ನಮ್ಮ ಆತ್ಮೀಯ ಬಳಗ.
ಎಲ್ಲ ಸೌಕರ್ಯಗಳ ನಗರೀಕರಣದ ಬದುಕಲ್ಲಿ ಯಾವಾಗಲೂ ಹಳ್ಳಿಯೂರಿನ ನೆನಪಿನ ನಾವೆಯಲ್ಲಿ ತೇಲಿಹೋಗುವ ನನಗೆ ದೀಪು ಈ ಅಂತರಾಳದ ಮಾಸ್ಟರ್ ಕಾಪಿ ಸೀಡಿ ಕೊಟ್ಟಾಗ ತುಂಬ ಖುಶಿಯಾಯ್ತು. ಇದು ದೀಪುನ ಮೊದಲ ಪ್ರಯತ್ನ. ಏನಾರೂ ಮಾಡ್ಬೇಕು ಅಕ್ಕಾ, ಸುಮ್ನೆ ಸಾಫ್ಟ್ವೇರ್ ಕೆಲ್ಸ ಮಾತ್ರ ಮಾಡ್ಕೊಂಡು ಸಾಕಾಗೋಗಿದೆ ಅಂತ ಈಗೊಂದು ವರ್ಷದ ಹಿಂದೆ ಅವನು ಅಂದಾಗ ನಾನು ನಕ್ಕಿದ್ದೆ. ಎಲ್ರಿಗೂ ಹಾಗೆ, ಆಮೇಲಾಮೇಲೆ ಅದೇ ಅಭ್ಯಾಸ ಆಗಿ ಸುಮ್ನಾಗ್ತಾರೆ ಅಂತ ಅಂದೂ ಇದ್ದೆ. ಅದಕ್ಕೆ ಅವನು ಇಲ್ಲಾ ಅಕ್ಕಾ, ನಾನು ಮ್ಯೂಸಿಕ್ಕಲ್ಲಿ ಏನಾರು ಮಾಡ್ಬೇಕು ನಮ್ಮ ಬದುಕು ತುಂಬಿಕೊಳ್ಳೋಕೆ ಬೇಕಾದಷ್ಟು ದಾರಿ ಇದ್ದೇ ಇರತ್ತೆ. ನಂಗೆ ಸಂಗೀತ.. ಅಂದಾಗ ನಂಗೆ ದೇಜಾ-ವೂ ಅನ್ಸಿದ್ದು ನಿಜ. ಎಳೇ ಕಣ್ಣಿನ ಕನಸುಗಳನ್ನ ಭಂಗಗೊಳಿಸುವ ಇಷ್ಟ ನಂಗೆ ಚೂರೂ ಇರಲಿಲ್ಲ.

ಅವನು ಗಿಟಾರ್ ಕಲಿಯುವುದು, ಕೀ ಬೋರ್ಡ್ ಕಲೀತಿರೋದು, ಈ ಮ್ಯೂಸಿಕ್ ಆಲ್ಬಂ ಮಾಡ್ಬೇಕಿದ್ರೆ ಏನೇನ್ ಮಾಡ್ಬೇಕು ಹೀಗೆಲ್ಲ ಹಂತಗಳಲ್ಲೂ ನನಗೆ ಒಂದೊಂದು ಅಪ್ ಡೇಟ್ ಸಿಗ್ತಾ ಇತ್ತು. ಈ ಕನಸುಗಳ ಹಾದಿಯ ಹೂ ಮೊಗ್ಗುಗಳ ಪರಿಚಯ ಸಿಕ್ಕಿದ್ದೇ ಆಗ ನಂಗೆ.
ನಮ್ಮೂರಿನ ಹುಡುಗ, ತಮ್ಮನ ಗೆಳೆಯ, ಎಳೆಯ ಚೈತನ್ಯ ಎಂಬೆಲ್ಲ ವಾತ್ಸಲ್ಯವನ್ನು ಮೀರಿದ ಒಂದು ಮೆಚ್ಚುಗೆ ನಂಗೆ ಅವನ ಮೇಲೆ.
ಥ್ಯಾಂಕ್ ಗಾಡ್ ಇಟ್ ಈಸ್ ಫ್ರೈಡೇ ಅಂತೇಳಿ ಸೊಂಟಕ್ಕೆ ಗೆಳತಿಯ ಕೈ ಸಿಕ್ಕಿಸಿಕೊಂಡು ರಾಜಧಾನಿಯ ರಸ್ತೆಗಳಲ್ಲಿ ಬೈಕು ಹತ್ತಿ ಹೊಗೆಯೆಬ್ಬಿಸುವ ಸಾಧ್ಯತೆಯ ಅಸಂಖ್ಯಾತ ಯುವಕರ ಮಧ್ಯೆ, ತನ್ನ ಸಂಜೆಗಳನ್ನ ತಾನು ಕಂಡ ಕನಸಿಗೆ, ತಾನು ಅನುಭವಿಸಬೇಕಿರುವ ಹುಚ್ಚಿಗೆ ಮೀಸಲಿಟ್ಟು, ಇವೆಲ್ಲದರ ನಡುವೆ ಗೆಳತಿಯ ಮಾತುಕತೆಗಿಷ್ಟು ಸಮಯ ಕೊಟ್ಟು ಏನೋ ಮಾಡಬೇಕು ಎಂಬಲ್ಲಿನ "ಬ್ಲಾಂಕ್ ಸ್ಪೇಸು"ಗಳಲ್ಲಿ ಸಂಗೀತದ ನೋಟುಗಳನ್ನ ತುಂಬಿಸುವುದು ನಿಜಕ್ಕೂ ವಿಶಿಷ್ಟ ಪ್ರಯತ್ನ.
ಅಕ್ಷರ, ಸಾಹಿತ್ಯ, ಸಂಗೀತ, ಲಯ ಎಲ್ಲವೂ ತುಂಬ ಪರಿಶ್ರಮ ಬೇಡುತ್ತವೆ. ಕರೋಕೆ ಸೀಡಿಗಳನ್ನಿಟ್ಟು ಕವಿತೆ ತುಂಬಿಸುವುದು, ಎಲ್ಲೆಲ್ಲಿಂದಲೂ ಕದ್ದ ರಾಗಗಳನ್ನಿಷ್ಟು ಮಿಸಳ್ ಭಾಜಿ ಮಾಡುವುದು ಹೊಸದೇನಲ್ಲ. ಎಲ್ಲರೂ ಅನಂತಸ್ವಾಮಿ,ಅಶ್ವತ್ಥ ಆಗುವುದಿಲ್ಲ. ಎಲ್ಲ ಅಸಂಗತ ಕವಿತೆಗಳೂ ಗೋಪಿ ಮತ್ತು ಗಾಂಡಲೀನ ಎನಿಸುವುದಿಲ್ಲ. ದೂರದ ನಕ್ಷತ್ರದಟ್ಟ ಕಣ್ಣು ನೆಟ್ಟವನ ಕೈಗಳಲ್ಲಿ ಮನೆಯ ಸುತ್ತಲಿನ ಕತ್ತಲಿಗೆ ಒಂದು ಹಣತೆ ಬೆಳಗುವ ಕೆಲಸ ಮಾಡಬೇಕೆಂಬ ತೀವ್ರತೆ ಎಲ್ಲರಿಗೂ ಅನಿಸುವುದೂ ಇಲ್ಲ. ದೀಪು ಮಾಡಿದ್ದು ಇಂತಹ ಪ್ರಯತ್ನ. ಊರಿಂದ ಬಂದು ಇಲ್ಲಿ ನೆಲೆಸಿದವರ ಹಾಗೆ ಹಳಹಳಿಕೆಗೆ ಬಲಿಯಾಗದೆ, ಯುವ ಸಹಜ ಉತ್ಸಾಹವನ್ನ ಮೊಟಕುಗೊಳಿಸದೆ ತನ್ನ ಚೈತನ್ಯಕ್ಕೊಂದು ಹರಿವನ್ನ ತಾನೇ ಒದಗಿಸಿಕೊಂಡ ಈ ಪ್ರಯತ್ನವನ್ನ ಮೆಚ್ಚಲೇಬೇಕು. ಅಭಿನಂದಿಸಲೇಬೇಕು.

ಇಷ್ಟಕ್ಕೂ ಇವನು ಮಾಡಿದ್ದು ಏನು?
ಅನಿಸಿದ ಕೂಡಲೆ ಸಂಗೀತ ಕಲಿಯಲು ಹೊರಟಿದ್ದು.
ಗಿಟಾರು ಕೊಂಡಿದ್ದಲ್ಲದೇ, ಕೀ ಬೋರ್ಡನ್ನೂ ಕಲಿತಿದ್ದು,
ಗೆಳೆಯ-ಗೆಳತಿಯರ ಗುಂಪಲ್ಲಿ ಕವಿತೆ ಹುಡುಕಿದ್ದು
ಮಾತುಗಳ ಸೇತುವೆಯಲ್ಲಿ ಆಲ್ಬಂ ಮಾಡಲು ಬೇಕಿರುವ ನಂಟು ಹುಡುಕಿದ್ದು
ಸ್ಟುಡಿಯೋ,ರೆಕಾರ್ಡಿಂಗ್, ಕೋ-ಆರ್ಡಿನೇಶನ್, ಗಾಯಕ-ಗಾಯಕಿಯರ ಆಯ್ಕೆ ಮತ್ತು ಮನವೊಲಿಕೆ,ಓಡಾಟ, ಹೊಂದಾಣಿಕೆ, ಕಾರ್ಯಕ್ಷಮತೆ ಎಲ್ಲವನ್ನೂ ನಿಭಾಯಿಸಿದ್ದು.
ಇದೆಲ್ಲದರ ಒಟ್ಟು ಮೊತ್ತವೇ - ಒಂಬತ್ತು ಭಾವದಲೆಗಳ ಮೆಲುದನಿಯನ್ನ ಸೀಡಿಯಲ್ಲಿ ಮೆಲೋಡಿಯಾಗಿ ಕೇಳಿಸಿದ್ದು.
ಇಷ್ಟೇನಾ ಇದು ಸ್ವಲ್ಪ ಎಫರ್ಟ್ ಹಾಕಿದ್ರೆ ಎಲ್ರೂ ಮಾಡ್ಬೋದು ಅನ್ನಿಸಿದ್ರೂ.. ಒಂದು ನೆನಪಿರಲಿ.
ಅಸ್ಪಷ್ಟ ಕನಸೊಂದು ತೀವ್ರ ಹಪಾಹಪಿಯಾಗಿ ಪ್ರಾಮಾಣಿಕ ಪ್ರಯತ್ನವಾಗಿ ಹಿಡಿದ ಗುರಿಯಾಗಿ ಮೂಡುವ ದಾರಿಯ ಸೆಳೆತಗಳು,ಅಡೆತಡೆಗಳು, ಸೋಮಾರಿತನ ಇದೆಲ್ಲವನ್ನೂ ಮೆಟ್ಟಿ ಮುಂದುವರಿಯುವ ಛಲ ಎಲ್ಲರಲ್ಲೂ ಇಲ್ಲ. ಹೋಗಲಿ ಬಿಡು ಅನ್ನುವುದು ಸುಲಭದ ದಾರಿ. ಈ ಹುಡುಗ ತನ್ನ ತೀವ್ರತೆಯನ್ನ ಕಳೆದುಕೊಳ್ಳದೇ ಅಂದುಕೊಂಡ ದಾರಿಯ ಮೊದಲ ಮೊಗ್ಗು ಅರಳಿಸಿಯೇ ಬಿಟ್ಟಿದ್ದಾನೆ.
ಇಂಪಿನ ದೂರ ದಾರಿಯನ್ನ ಸಾಗುವ ಚೈತನ್ಯ, ಸಂಗಾತಿಯ ಜೊತೆ ಇವನಿಗಿದೆ. ಗೆಳೆಯರ ಬಳಗವಿದೆ, ಎಲ್ಲರನ್ನೂ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಪ್ರಾಮಾಣಿಕವಾದ ಫ್ರೆಶ್ ಆದ ಮನಸ್ಸಿದೆ.
ಅಂತರಾಳದಲ್ಲಿ ಭಾವಜೀವಿಯೊಬ್ಬನ ಮೆಲ್ದನಿಗಳ ಹಾಯಿದೋಣಿಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ದೋಣಿ, ದೊಡ್ಡ ನಾವೆಯಾಗಿ ಭಾವ-ಗೀತೆಗಳ, ಸುಗಮ ಸಂಗೀತದ ಸಮುದ್ರದಲ್ಲಿ ತೇಲಲಿ ಎಂಬುದು ನನ್ನ ಹಾರೈಕೆ.
ಸುಲಭ ಪುನರಾವರ್ತಿತ ಪದಗಳ ಹಂಗನ್ನು ಮೀರಿ, ಟ್ಯೂನುಗಳಿಗೆ ಕವಿತೆಯನ್ನು ಹೊಂದಿಸುವ ಅವಶ್ಯಕತೆಯನ್ನು ದಾಟಿ, ನಮ್ಮ ಹಿರಿಯ, ಮತ್ತು ಇತ್ತೀಚಿನವರೆಗಿನ ಕವಿಗಳ ಕವಿತಾ ಸಂಗ್ರಹಕ್ಕೆ ದೀಪು ಸಂಗೀತ ಸಂಯೋಜಿಸುವಂತಾಗಲಿ. ಕನ್ನಡ ಬರಿಯ ನಾಡ ಉತ್ಸವಗಳಲ್ಲಿ ಬಿಕರಿಯಾಗುವ ಮಾಲು ಎಂಬ ಮಾತುಗಳನ್ನು ಸುಳ್ಳು ಮಾಡುವ, ನೆಟ್ ಯುಗದ ಯುವ ಕನ್ನಡ ಮನಕ್ಕೆ ಸೇತುವೆಯಾಗುವ ಕೆಲಸವು ದೀಪುವಿನಿಂದ ಮತ್ತವನ ಗೆಳೆಯರ ಬಳಗದಿಂದ ಆಗಲಿ ಎಂದು ಬಯಸುತ್ತೇನೆ.

ಒಳಿತೇ ಹಾಡಾಗುವ ದಾರಿಯಲ್ಲಿ ದೀಪಕ ರಾಗ ನುಡಿಸಿದ ಈ ಕಿರಿಯ ವಯಸ್ಸಿನ ತುಂಬು ಚೈತನ್ಯಕ್ಕೆ ನನ್ನ ಮೆಚ್ಚುಗೆ,ಅಭಿನಂದನೆ.
ಅಂತರಾಳ ಧ್ವನಿಮುದ್ರಿಕೆ(ಅಡಕಮುದ್ರಿಕೆ)ಯನ್ನು ನೀವೂ ತಗೊಂಡು, ಕೇಳಿ, ಬೆನ್ತಟ್ಟಬೇಕು.

 - ಸಿಂಧು ರಾವ್
ಲೇಖಕಿ, ಆರೆಕಲ್ ಉದ್ಯೋಗಿ
http://nenapu-nevarike.blogspot.com/

Tuesday 29 November 2011

ನಮ್ಮ ಪಾಲಿನ ಹಾಡು

ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್‌ರಂತಹ ಗಾಯಕ-ಸಂಗೀತಕಾರರಿಂದ ವಿಶೇಷ ಹರಿವು ಪಡೆದುಕೊಂಡ ಕನ್ನಡ ಸುಗಮ ಸಂಗೀತ ಕ್ಷೇತ್ರ ಈಗಲೂ ಅಂಥಾ ಸುಗಮವೇನೂ ಅಲ್ಲ. ಲಹರಿಯಂಥ ಒಂದೆರಡು ಸಂಸ್ಥೆಗಳನ್ನು ಹೊರತುಪಡಿಸಿದರೆ ಈ ಕ್ಷೇತ್ರವನ್ನು ಪೊರೆಯುವ ಸಂಸ್ಥೆಗಳ ವಿಳಾಸಗಳೇ ಕಮ್ಮಿ. ಕನ್ನಡದಲ್ಲಿ ಒಂದು ಪುಸ್ತಕ ಪ್ರಕಟಿಸುವುದು ಈಗ ಸುಮಾರು ೨೫ ಸಾವಿರ ರೂಗಳ ಬಾಬತ್ತು. ಆದರೆ ಧ್ವನಿಮುದ್ರಿಕೆಗಳ ಕೆಲಸ ಅಷ್ಟು ಸುರಳೀತ ಅಲ್ಲ.  ಹೊಸಬರು ಮೀಟಿದ ಹೃದಯ ತಂತಿಗಳನ್ನು ಜನರಿಗೆ ತಲುಪಿಸುವುದಂತೂ ಸೆಳೆತಕ್ಕೆ ವಿರುದ್ಧವಾದ ನಡಿಗೆ. ಆದರೆ ಗೆಳೆಯರು ಪರಸ್ಪರ ಕೈಹಿಡಿದರೆ, ಒಂದು ಭಾವದ ಅಣೆಕಟ್ಟು ಸಾಧ್ಯ ಅನ್ನೋದಕ್ಕೆ ಉದಾಹರಣೆ ಈ ಅಂತರಾಳ’. ಸಾಗರ ಮತ್ತು ಬೆಂಗಳೂರಿನ ಒಂದಷ್ಟು ಜನ ಗೆಳೆಯರು ಹೆಗಲಿಗೆ ಹೆಗಲು ಕೊಟ್ಟು ಹೊರತಂದ ಭಾವಗೀತೆಗಳ ಈ ಸಿ.ಡಿ. ಅಂತರಾಳ. ಲಹರಿಇದರ ಮಾರ್ಕೆಟಿಂಗ್ ಹೊಣೆ ಹೊತ್ತುಕೊಂಡಿದೆ. ನಾದ ಸಮುದ್ರದಲ್ಲಿ ಸಾವಿರಾರು ಅಲೆಗಳು.
ಸಾಗರದಲ್ಲಿರುವ ಚಿನ್ಮಯ್ ಈ ಹಾಡುಗಳನ್ನು ರಚಿಸಿದ್ದರೆ, ಸಾಗರದಿಂದ ಬೆಂಗಳೂರಿನ ಜನಸಾಗರಕ್ಕೆ ಬಿದ್ದ ಯುವಕ ದೀಪಕ್ ಕೋರಡಿ ಸಂಗೀತ ನೀಡಿದ್ದಾರೆ. ದೀಪಕ್ ಮತ್ತು ಅವರ ಸಾಫ್ಟ್‌ವೇರ್ ಗೆಳೆಯರು ಈ ಭಾವಯಾನದಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಊರು-ಬೆಂಗಳೂರು-ಸಾಫ್ಟ್‌ವೇರುಈ ಮೂರರ ಮಧ್ಯೆ ಒಂದು ಸುಗಮ ಸೇತುವೆಯಾಗಿ ಈ ಧ್ವನಿಮುದ್ರಿಕೆ ರೂಪುಗೊಂಡಿರುವುದೇ ಸಂತೋಷದ ಸಂಗತಿ. ಕನ್ನಡವನ್ನು ಕಾಪಾಡುವ ಕಂದಮ್ಮಗಳು ಇನ್ನೂ ಇವೆ ಅನ್ನುವುದಕ್ಕೆ ಸಾಕ್ಷಿ.    
ಇಲ್ಲಿನ ೯ ಹಾಡುಗಳಲ್ಲಿ ಮೂರು ಹಾಡುಗಳನ್ನು ರಾಜೇಶ್‌ಕೃಷ್ಣನ್, ಎರಡು ಹಾಡುಗಳನ್ನು ಅನುರಾಧ ಭಟ್, ಇನ್ನೆರಡನ್ನು ಚಿನ್ಮಯ್, ಮತ್ತೆರಡು ಹಾಡುಗಳನ್ನು ಚೇತನ್ ಸೋಸ್ಕ ಹಾಡಿದ್ದಾರೆ. ಇವೆಲ್ಲವುಗಳಲ್ಲಿ ಒಂದೇ ಹೆಣ್ಣು ದನಿಯಾದ್ದರಿಂದಲೋ ಏನೋ, ಅನುರಾಧಾ ಭಟ್ ಅವರು ಹಾಡಿದ ಎರಡೂ ಹಾಡುಗಳು ಗುಂಗಾಗಿ ಕಾಡುತ್ತವೆ ! ಜಂಟೀ ಖಾತೆಗೆ ಈಗಲೇ ಕೂಡಿಕೊ’, ’ತೇಲೀ ನಿನ್ನ ಅಂಗೈಯಲ್ಲಿ ಜೋಲಿ ಹಾಡಿಸೂ’, ’ನಿನ್ನ ರಾಗಕಿದು ನನ್ನ ಹಾಡು / ನನ್ನ ಪದಗಳ ನೀನು ಹಾಡು / ತೇಲಿ ಸಾಗುವ ಭಾವದೂರಿಗೆ ನಮ್ಮದಾಗಲಿ ಈ ಘಳಿಗೆ’ - ಎಂಬ ಸಾಲುಗಳಲ್ಲಿ ಹೊಸರುಚಿ ಇದೆ.
ಆದರೆ ಕನಸು-ನನಸು, ಭಾವ-ಜೀವ, ಬಿಂಬ-ಪ್ರತಿಬಿಂಬ, ಅಲೆ-ಸೆಲೆ, ಮರೆವು-ನೆನಪು ಇಂತಹ ಬಹೂಪಯೋಗಿ ಪದಗಳ ಪುನರಾವರ್ತನೆಯನ್ನು ತಪ್ಪಿಸಬಹುದಿತ್ತು. ಜತೆಗೆ ಗಂಡು-ಹೆಣ್ಣಿನ ಸಂಬಂಧದ ನಾನು-ನೀನುಹಾಡುಗಳನ್ನು ಮೀರಿದವೂ ಇದ್ದರೆ ಇದು ಮತ್ತಷ್ಟು ಸಮೃದ್ಧವಾಗುತ್ತಿತ್ತು. ಹಾಡಿನ ಸಾಹಿತ್ಯ ಏನೇ ಇದ್ದರೂ ಅದನ್ನು ಮರೆಸಿ, ಜನರಿಗೆ ಇಷ್ಟವಾಗುವ ಹಾಗೆ ಸಂಯೋಜನೆಗೊಳ್ಳುವ ಸಂಗೀತದ್ದು ಒಂದು ತೆರನಾದರೆ, ಒಳ್ಳೆಯ ಸಾಹಿತ್ಯ ಮತ್ತಷ್ಟು ಮನಸ್ಸಿಗೆ ನಾಟುವ ಹಾಗೆ ಸಂಗೀತ ಸಂಯೋಜಿಸುವುದು ಇನ್ನೊಂದು. ಹಾಡಿಗೆ ತಕ್ಕ ರಾಗ ಹೇಗೋ, ತಕ್ಕುದಾದ ತಾಳವೂ ಬೇಕಲ್ಲ. ಬಹುಶಃ ದೀಪಕ್‌ರದ್ದು ಇದು ಮೊದಲ ಸಂಗೀತ ಸಂಯೋಜನೆಯ ಧ್ವನಿಮುದ್ರಿಕೆ. ಅವರ ಸೀಮಿತ ಅನುಭವ-ಅನುಕೂಲಗಳಲ್ಲಿ, ಪದ-ಭಾವ ಕೆಡದಂತೆ ಸಂಗೀತ ಸಂಯೋಜಿಸುವಲ್ಲಿ ಅವರು ಯಶ ಸಾಧಿಸಿದ್ದಾರೆ. 
ಕನ್ನಡದ ಕಲುಷಿತ ಸಿನಿಮಾ ಹಾಡುಗಳು, ರಿಮೇಕ್ ಹಾಡುಗಳು, ಕನ್ನಡ ಪದಗಳ ಅರಿವೇ ಇಲ್ಲದ ಪರಸ್ಥಳದ ಗಾಯಕರು - ಇಂತಹ ಅಸಂಬದ್ಧದ ನಡುವೆ ಈ ಪ್ರಾಮಾಣಿಕ ಪ್ರಯತ್ನ ಹಾಯೆನಿಸುತ್ತದೆ. ಒಂದು ಶುದ್ಧ ಮನಸ್ಸು ಈ ಧ್ವನಿಮುದ್ರಿಕೆಯಲ್ಲಿ ತುಂಬಿಕೊಂಡಿರುವುದು ಆನಂದದಾಯಕವಾಗಿದೆ.   
- ಸುಧನ್ವಾ ದೇರಾಜೆ
ಲೇಖಕ, ಜೀ ಕನ್ನಡ ಉದ್ಯೋಗಿ